ಗುರುವಾರ, ನವೆಂಬರ್ 21, 2013

ಚಳಿ ಹನಿಗಳು.

ಚಳಿ ಹನಿಗಳು.
**************
ಡಾ.ಪ್ರಕಾಶ ಗ.ಖಾಡೆ

ಥರಗುಟ್ಟುವ ಚಳಿಗೆ
ಬೆಚ್ಚನೆಯ ಕಂಬಳಿಯೇ ಲೇಸು ;
ಗದ್ ಗದ್ಗಿತ ಮನಕೆ 
ಕಾವ್ಯ ವಾಚನವೇ ಸೊಗಸು.
*****
ಗುಡಿಸಲ ರಾತ್ರಿಯ
ಬೆಳಗುತ್ತಿವೆ ಬಾನ ಚುಕ್ಕೆಗಳು;
ಥರಗುಟ್ಟುವ ಚಳಿಯಲ್ಲೂ
ನಲಿಯುತ್ತಿವೆ ಮಕ್ಕಳು.
*****
ಚಳಿ ಗಾಳಿ ಮಳೆಗೆ
ಇಳೆ ಅರಳಿತು ;
ಕವಿ ಕಾವ್ಯ ಕಲ್ಪನೆ
ಗರಿಗೆದರಿತು.
*****
ಕತ್ತಲೆ ಮತ್ತು ಚಳಿ
ಜೊತೆಯಾಗಿವೆ ;
ಕವಿಯ ಮನದ
ಭಾವ ಬಯಲಾಗಿದೆ.
*****
ಚಳಿಗೆ ಉರಿ 
ಕಾಯಿಸಿಕೊಳ್ಳುತ್ತ ಇದ್ದಾರೆ
ಮಕ್ಕಳು ;
ನಡುಗುತ್ತ ಬೀಡಿ
ಹೊತ್ತಿಸಿಕೊಳ್ಳುತ್ತ ಇದ್ದಾರೆ
ಮುದುಕರು.
*****
ಚಳಿಗೆ ನಡುಗುವ ಮಕ್ಕಳಿಗೆಹೊದಿಕೆಯಾಗಲಿ ನನ್ನ ಕವನ ;
ಮುದುಡಿ ಮಲಗಿದ ಕಂದಮ್ಮಗಳಿಗೆ
ತಾಯ ಮಡಿಲಾಗಲಿ ನನ್ನ ಕವನ.
-ಡಾ.ಖಾಡೆ





ಸಾಲು ಹನಿಗಳು-3

ಸಾಲು ಹನಿಗಳು-3

  -ಡಾ.ಪ್ರಕಾಶ ಗ.ಖಾಡೆ

ಕಳೆದು ಹೋದದ್ದು ಸಿಕ್ಕರೆ 
ಬಣ್ಣ ಬಳಿಯಬೇಡಿ ;
ಅದು ನನ್ನ ಕವಿತೆಯ
ಒಡಲ ಭಾವ.
*****
ಎಲ್ಲವೂ ಕಾವ್ಯವಾಗಬೇಕಿಲ್ಲ
ಅನುಭವದ ಮೂಸೆಯಲ್ಲಿ ;
ಎಷ್ಟೊಂದು ಉಳಿದಿಲ್ಲ
ಮೊಳಕೆಯೊಡೆಯದ ಬೀಜ
ಭೂ ತಾಯಿಯ ಒಡಲಲ್ಲಿ.

*****
ಪುಟ್ಟ ಗೂಡಿನಲ್ಲಿ
ಮರಿ ಹಕ್ಕಿ ಕಾಯುತ್ತಿದೆ;
ಅಮ್ಮ ತರುವ
ಹಾಲ್ದೆನೆಯ ಎಳೆ ಸವಿಗೆ.

*****
ಮೌನ ಪಯಣದಲ್ಲಿ
ಎಷ್ಟೊಂದು ಕನಸು ಕನವರಿಕೆಗಳು;
ವಾಸ್ತವದ ಅರುವಿನಲ್ಲಿ
ಬಯಲಾಗುವ ಬಯಕೆಗಳು.

*****
ಅಂಬರದ ಬಯಲು
ಮೈದುಂಬಿಕೊಳ್ಳುವ ಸಮಯ;
ಗಿರಿ ನವಿಲು ಜೊತೆ ಅರಸಿ
ಕುಣಿವ ತನ್ಮಯ.

*****
ಹಾರುವ ಹಕ್ಕಿಗಳಿಗೆ
ಆಗಸವೇ ಆಡುಂಬೊಲ ;
ಹಾಡುವ ಜನಪದರಿಗೆ
ಬದುಕೇ ಜಗದಗಲ.

*****
ಚಂದಿರ ಮೂಡುವ ಹೊತ್ತು
ಮರೆಗೆ ಸರಿದ ಚುಕ್ಕೆಗಳು ;
ಕವನ ಮೂಡುವ ಘಳಿಗೆ
ಮೂಲೆ ಸೇರಿದ ಮಾತುಗಳು.
*****
ಬಿಸಿಲಿಗೆ ಒಣ ಹಾಕಿದ
ಹಪ್ಪಳದ ಸವಿ
ಎಣ್ಣೆಯಲ್ಲಿ ಕರಿದಾಗ ;
ಮೌನ ಕುಲುಮೆಯಲ್ಲಿ 
ಕಟ್ಟಿದ ಕಾವ್ಯ ಸವಿ
ಮನದಾಳದಲ್ಲಿಳಿದಾಗ.
*****
ಹರಿವ ನೀರಿಗೆ
ತಟದ ಗುರುತು :
ಮೋಹಕ ನಿರಿಗೆ
ನಾರಿ ಮಹತು.
*****
ಎಲ್ಲ ಓದಿಯಾದ ಮೇಲೆ
ಕೊನೆಗೆ ನಿಮ್ಮ ರುಜು ಬೇಡ ;
ನನ್ನ ಕವಿತೆಗೆ
ಬದುಕೇ ಬಯಲು.

-ಡಾ.ಪ್ರಕಾಶ ಗ.ಖಾಡೆ


ಸೋಮವಾರ, ನವೆಂಬರ್ 11, 2013

ಸಾಲು ಹನಿಗಳು -2 ಡಾ.ಖಾಡೆ

ಸಾಲು ಹನಿಗಳು -2
ಡಾ.ಪ್ರಕಾಶ ಗ.ಖಾಡೆ



ಧ್ಯಾನಸ್ಥ ಮನಸ್ಥಿತಿಗೆ
ಮೀನ ಹಿಡಿವ ಬಕ ಉದಾಹರಣೆ :
ಬಲಿಯಾದ ಮೀನ
ಬದುಕಿಗೆ ಏನು ಉದಾಹರಣೆ ?
*********
ಎಳೆ ಚಿಗುರ ಮೆದ್ದ
ಕೋಗಿಲೆಯ ಆಲಾಪ :
ಹತಗೊಂಡ ಚಿಗುರಿಗೆ
ಕಳಕೊಂಡ ನೆನಪ.
*********
ಮರೆತ ಕ್ಷಣದಿಂದ
ಜೋಪಾನವಾಗಿವೆ
ಮನದ ತುಂಬ ನೆನಪುಗಳು;
ಮರುಕಳಿಸಿ ಬಂದರೂ
ನಿಂತಿಲ್ಲ ಬಿಂಬದಲ್ಲಿ
ಹುಸಿ ಕನವರಿಕೆಗಳು.
*********

ಶನಿವಾರ, ನವೆಂಬರ್ 9, 2013

ಸಾಲು ಹನಿಗಳು -ಡಾ.ಖಾಡೆ



ಸಾಲು ಹನಿಗಳು
**************

                                           - ಡಾ.ಪ್ರಕಾಶ ಗ.ಖಾಡೆ

ಎಷ್ಟೊಂದು ಹೂ ಗಿಡಗಳನ್ನು
ಹಚ್ಚಿದ್ದಾರೆ ವರಾಂಡದಲ್ಲಿ;
ಕಣ್ತುಂಬಿ ಕೊಳ್ಳಬೇಕೆಂದರೆ
ಕಟ್ಟಿದ್ದಾರೆ ನಾಯಿ.

**********
ಸಂತೆಯಲ್ಲಿ ಸುಮ್ಮನೆ ಹೋದರೂ
ಏನು ಬೇಕೆಂದು ಕೇಳುತ್ತಾರೆ;

ಕಾವ್ಯ ಕಳಕೊಂಡಿದೆ
ಹುಡುಕಿ ಕೊಡುತ್ತಾರೇನು ?
***********
ಭಾವದೊಳಗಿನ
ಕಾವ್ಯ ತೆನೆ :
ಕುದಿದ ಹಾಲಿನ
ಆರಿ ಬಂದ ಕೆನೆ.
***********
ನಡೆದ ಹಾದಿಯ
ಪಡೆದ ಭಾಗ್ಯ :
ಸ್ನೇಹದೊಲುಮೆಯ
ಬೆಸುಗೆ ನಿತ್ಯ.
*********
ಬಿಸಿಲ ದಾರಿಯಲ್ಲಿ
ಮರದ ನೆರಳಿನ ಆಸರೆ.
ದಣಿದ ಮನಕೆ
ಕಾವ್ಯ ಕನ್ನಿಕೆಯ ಆ ಸೆರೆ.
********
ಕೆನೆಗಟ್ಟಿದ ಹಾಲು
ಕುದಿತದ ಸಮಯ ಬಯಸಿತು.
ಕಂಡರಿಸಿದ ಕಾವ್ಯ
ಧ್ಯಾನದ ಪರಿಯ ಬೆಸೆಯಿಸಿತು.
**********

ಭಾನುವಾರ, ನವೆಂಬರ್ 3, 2013

ಪ್ರಕಾಶಮಾನ ಪದ್ಯಗಳು
       (ದೀಪಾವಳಿ ಹೊತ್ತಿಗೆ)
*************************

ಡಾ.ಪ್ರಕಾಶ ಗ.ಖಾಡೆ

ಯಾರು ಹಚ್ಚಿಟ್ಟರೂ
ದೀಪಗಳ ಸಾಲು
ಕಳೆಯುವದು ಕತ್ತಲೆ
ಬೆಳಕದುವೆ ಮೇಲು. 
   
****
ಉಳ್ಳವರು ಹಚ್ಚಿದ್ದಾರೆ
ತುಪ್ಪದ ದೀಪ ,
ಕರಗಿಸಿ ಬೆಣ್ಣೆ

ಗುಡಿಸಲ ಮಕ್ಕಳು 
ಹಸಿದಿದ್ದಾರೆ
ಹಾಕಲು ಇಲ್ಲ,
ಒಗ್ಗರಣೆಗೆ ಎಣ್ಣೆ.

******
ಹಣತೆ ತುಂಬ ಎಣ್ಣೆ ಬತ್ತಿ
ಪ್ರಜ್ವಲಿಸುವ ಬೆಳಕು
ಕರಗಿ ಕತ್ತಲು ಹಸನಾಗಲಿ
ನೊಂದವರ ಬದುಕು
*******
ದೀಪದಿಂದ ದೀಪ ಹೊತ್ತಿ
ತುಂಬಿ ಬರಲಿ ಬೆಳಕು
ಶ್ರಮದ ದುಡಿಮೆಗೆ ತಕ್ಕಫಲಿತ
ಸಿಗಲಿ ಎಲ್ಲ ಕಾಲಕು .
*******
ಮನದ ಕತ್ತಲೆಯ 
ಕಳೆಯಲು ಬೇಕು 
ಅಕ್ಷರದ ರೂಪ

ಜಗದ ಕತ್ತಲೆಯ
ಕಳೆಯಲು ಸಾಕು
ಬೆಳಗುವ ದೀಪ
*******
ಕತ್ತಲಲ್ಲಿ ಹಚ್ಚಿಟ್ಟಿದ್ದಾರೆ
ಎಷ್ಟೊಂದು ಜ್ಯೋತಿ ;
ಹಬ್ಬಿದೆ ಎಲ್ಲಕಡೆ ಬೆಳಕಿನ ದೀಪ್ತಿ.

ಮೂಡಣ ಸೂರ್ಯ
ಮೂಡುವ ಹೊತ್ತಿಗೆ
ಅರೇ ಮರೆಯಾಯಿತೇಕೆ
ಥಳಕು ಬಳುಕಿನ ಕಾಂತಿ.
***********
-ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ