ಭಾನುವಾರ, ಡಿಸೆಂಬರ್ 29, 2013

ಮತ್ತೆ ಮತ್ತೇ ಹನಿಗಳು.


ಮತ್ತೆ ಮತ್ತೇ ಹನಿಗಳು.

ಡಾ.ಪ್ರಕಾಶ ಗ.ಖಾಡೆ.


ಯಾರು ಪೋಣಿಸಿಟ್ಟೀರಿ ಇಲ್ಲಿ
ಪದಗಳಲ್ಲಿ ಹುದುಗಿದ ಮಾಲೆ :
ಎಷ್ಟೊಂದು ಮೈಚೆಲ್ಲಿವೆ ಹೂವರಾಶಿ
ನಮ್ಮೊಲುಮೆಯ ತೇರಿಗೆ.
*****
ಅಲ್ಲಿ ಮಾತುಗಳಿಗೆ
ಸುಮ್ಮನಿರಿಸುವ ಧಾವಂತ :
ಹೇಳಬೇಕಾದವರು
ನೋಡುತ್ತಿದ್ದಾರೆ ದಿಗಂತ.
*****
ಎಷ್ಟೊಂದು ಮಾಲೆಗಳು
ಇಲ್ಲಿ ಬಿದ್ದು ಬಿಕರಿಯಾಗಿವೆ :
ಈಗಷ್ಟೇ ಹೋದವರ ಕೊರಳ
ಅಲಂಕರಿಸಿ ಮೆರೆದಾಗಿದೆ.
*****
ಅವಳ ನಗುವಿಗೆ
ಅರ್ಥ ಹುಡುಕುತ್ತಿದ್ದೇನೆ :
ಹುಡುಕಿ ಕೊಡುವುದು ಬೇಡ
ನಿಮ್ಮ ಅರ್ಥಕೋಶದಿಂದ.
*****
ಎಷ್ಟೊಂದು ಧ್ವನಿಗಳು ಏಕವಾಗಿವೆ
ಈ ಲೋಕ ಬಯಲಲ್ಲಿ :
ದಾಖಲಾಗದೇ ಎಲ್ಲಿ ಹೋದವು
ಹುಟ್ಟು ಸಾವಿನ ಬದುಕಿನಲ್ಲಿ.
*****
ಮುಚ್ಚಿದ ಬಾಗಿಲು ಮುಂದೆ
ಕಾವಲು ಕುಳಿತ ನಾಯಿ :
ಮತ್ತೆ ಮತ್ತೆ ಎಚ್ಚರಗೊಂಡು
ಕಾಯುತ್ತಿತ್ತು ಬಂದಾಳೆ, ತಾಯಿ.
*****
ಗಾಯದ ನೋವು
ಮಾಯುತ್ತಾ ಬಂದಂತೆ :
ಕವಿತೆ ಕರಗುತ್ತಾ
ಹೋಗುತ್ತದೆ.
*****
ದೆಹಲಿ ಗದ್ದುಗೆ ಏರಿತು
ಅತಿ ಸಾಮಾನ್ಯ ಪೊರಕೆ.
ಜನತಂತ್ರದ ಉಸಿರಿಗೆ
ಇರಲಿ ಸದಾ ಶಕ್ತಿ ಪೂರೈಕೆ.
*****
ಕಣ್ಣ ತುಂಬಾ ತುಂಬಿಕೊಳ್ಳಿ
ಪ್ರಕೃತಿ ಸೊಬಗ ಐಸಿರಿ;
ನಾಳೆಗಾಗಿ ಉಳಿಸಿ ಬೆಳೆಸಿ
ಮನತುಂಬ ಹರಸಿ.
*****
ರಾತ್ರಿ ಆಗಸದಲ್ಲಿ ಮೆರೆವ
ನಕ್ಷತ್ರಗಳ ಒಡಲು ;
ಬೆಳಕ ಬಯಲಲ್ಲಿ ಬಿತ್ತಿದ
ಥಳಕು ಬಳುಕಿನ ಮಡಿಲು.
*****
ಹೇಳದೆ ಬಂದು ಕೇಳದೆ ಹೋದ
ದಾಖಲಾಗದ ಕನಸುಗಳು ;
ಮೌನದಲ್ಲೂ ಮಾತು ಮರೆತ
ಹುಸಿ ಮನದ ಭಾವಗಳು.
*****
ಜಗವೇ ಒಂದು ಗೂಡು
ಒಂದುಗೂಡಲು :
ಕಟ್ಟಬೇಡಿ ಅಡ್ಡಗೋಡೆ
ಮನಸ್ಸು ಒಡೆಯಲು.
*****
ಹರಿದ ಹಾಳೆಯಲ್ಲಿ
ಅವಳ ಚಿತ್ರವಿತ್ತು :
ತಾಯ ಮೊಗದ ನಗೆ 
ಎಂದೂ ಮಾಸದಂತಿತ್ತು.
*****

ಮನದ ಮೂಲೆಯಲ್ಲಿ
ಬಿದ್ದುಕೊಂಡಿವೆ
ಆಪ್ತವಾಗದ ಭಾವಗಳು ;
ಹರಿದು ಬಿಸಾಕಿದ ಹಾಳೆಯಲ್ಲಿ
ಬರೆಯದೇ ಉಳಿದ ಸಾಲುಗಳು.
*****

ಎಲ್ಲ ಹೇಳಿ ಮುಗಿಸಿಯಾಗಿದೆ
ಅವರಿವರ ಕಥೆ ;
ಹೇಳದೆ ಸುತ್ತಿಕೊಳ್ಳುತ್ತಿದೆ
ಅರಿವಿಗೆ ಬಾರದ ನಾಗರಿಕತೆ.
*****
ಮಗುವಿನ ಮುಗ್ದತೆಯಲ್ಲೂ
ಎಷ್ಟೊಂದು ಕವಿತೆಗಳು ;
ಓದುವ ತಾಯಿಯಲ್ಲೂ
ಮಹಾಕಾವ್ಯದ ಬೇರುಗಳು.
*****
ಊರೂಳಗೆ ಊರು
ತಳದ ಗುರುತು ತಾಗದೆ ;
ಮನುಕುಲವ ಬೆಸೆದು
ಬಯಲಾಗು ಬೇರು ಬಿಡದೆ.
*****
ಎಷ್ಟು ದಾರಿ ಸವೆದರೂ
ಎಲ್ಲೂ ಸೇರುವುದಿಲ್ಲ ಒಂದಕ್ಕೊಂದು ರೈಲು ಹಳಿ;
ಎಷ್ಟು ದೂರ ಸಾಗಿದರೂ
ಎಲ್ಲೂ ಬಾನು ಕೂಡಿದಂತೆ ಕಾಣುತ್ತಿಲ್ಲ ಈ ಇಳೆ.
*****
ನನ್ನ ಕವಿತೆಗೆ ಹೇಳಲೇನು
ಉಳಿದಿಲ್ಲ ಇಂದಿಗೆ :
ತನ್ನ ರೂಪ ಆಕಾರಕ್ಕೆ 
ಕಾಯುತ್ತಿಲ್ಲ ನಾಳೆಗೆ.
*****
ಕಡಿದ ಮರದಲ್ಲೂ
ಕೆತ್ತನೆಗೆ ಕಾಯ್ದ ಮೂರತಿ ;
ಹರಿವ ನೀರಲ್ಲೂ
ಬೆಳೆವ ಪೈರಿನ ಕೀರೂತಿ.
*****
ಮೌನಕ್ಕೆ ಶರಣಾಗಿದ್ದಾರೆ
ಮಾತು ಬಲ್ಲವರು ;
ಜೋತು ಬಿದ್ದಿವೆ
ಮೋಡಿ ಮಾತಿಗೆ ಕಿವಿಗಳು.
*****
ಎಂದೋ ಬರೆದ ಚಿತ್ರ
ಹರಿದು ಹಾಕಿದೆ ;
ಚಿಂದಿ ಆಯುವ ಹುಡುಗರು
ಜೋಡಿಸಿಟ್ಟು ನೋಡಿದರು.
*****
ಜೋಗುಳ ಕೇಳಿ ಮಗು ಮಲಗಿದೆ
ಮಾತು ಇರಲಿ ಮೆಲ್ಲಗೆ :
ತಾಯ ಕನಸಿಗೆ ನಿದಿರೆ ತುಂಬುತಿದೆ
ಅರಳಬೇಕಿನ್ನು ಮಲ್ಲಿಗೆ.
*****
ಕೇಳಿಸಲೆಂದು
ಎಲ್ಲ ಹೇಳಬೇಕಿಲ್ಲ :
ಕಣ್ಣುಗಳಿಗೆ ಮೌನ
ಅರ್ಥವಾಗುತ್ತದೆ.
*****
ಕೊಡೆ ಹಿಡಿಯಬಾರದು
ಎಳೆ ಬಿಸಿಲಿಗೆ ;
ಹಣೆ ಮಣಿಯಬಾರದು
ಕಂಡವರ ಕಾಲಿಗೆ.
******
ಎಲ್ಲವೂ ಕಾವ್ಯವಾಗಬೇಕಿಲ್ಲ
ಅನುಭವದ ಮೂಸೆಯಲ್ಲಿ ;
ಎಷ್ಟೊಂದು ಉಳಿದಿಲ್ಲ
ಮೊಳಕೆಯೊಡೆಯದ ಬೀಜ
ಭೂ ತಾಯಿಯ ಒಡಲಲ್ಲಿ.
*****
ಪುಟ್ಟ ಗೂಡಿನಲ್ಲಿ
ಮರಿ ಹಕ್ಕಿ ಕಾಯುತ್ತಿದೆ;
ಅಮ್ಮ ತರುವ
ಹಾಲ್ದೆನೆಯ ಎಳೆ ಸವಿಗೆ.
*****
ಕವಿತೆ ಹಲವು
ಅರ್ಥಗಳ ಮೊತ್ತ :
ಈಗ ಹೇಳಿ ಎಲ್ಲಿ ಹೋಯಿತು
ನಿಮ್ಮ ಚಿತ್ತ ?.
**********************
ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ
ಮೊ.9845500890





ಗುರುವಾರ, ಡಿಸೆಂಬರ್ 5, 2013

ಸಾಲು ಸಾಲು ಹನಿಗಳು.


ಸಾಲು ಸಾಲು ಹನಿಗಳು.

************************

ಡಾ.ಪ್ರಕಾಶ ಗ.ಖಾಡೆ


ಮೌನದ ಪ್ರಸವ ಕಾಲದಲ್ಲಿ
ಕಾವ್ಯ ಹುಟ್ಟು ಪಡೆದಂತೆ :
ಲಯ ಭಾವ ವಸ್ತುಗಳು
ಮೈದುಂಬಿಕೊಳ್ಳುತ್ತವೆ.
************
ಯಾರು ನುಡಿಸಿದರು
ನಾದ ಲೋಕದ ತಂತಿ :
ಕಳೆದು ಹೋಗಿದೆ ಮನದಲ್ಲಿ
ಮಡುಗಟ್ಟಿದ ಭ್ರಾಂತಿ.
**********
ಪಲ್ಲಕ್ಕಿ ಮೇಲೆ
ಕುಳಿತಿದ್ದಾರೆ ಪ್ರಭುಗಳು :
ಹೊರುವವರಿಗಾಗಿ
ಕಾಯುತ್ತಿದ್ದಾರೆ ಹಿಂಬಾಲಕರು.
***********

ಗುಡ್ಡ ಕೊರೆದು
ದಾರಿ ಮಾಡಿದ್ದಾರೆ :
ಅಡ್ಡ ಬಂದ ಪ್ರಾಣಿ ಪಕ್ಷಿಗಳಿಗೂ
ದಾರಿ ತೋರಿಸಿದ್ದಾರೆ.
***********
ಒಡೆದ ಚೂರುಗಳಲ್ಲಿ
ಜೋಡಿಸಿಟ್ಟ ರೂಪ :
ಮನಸ್ಸಿನ ಮೂಲೆಯಲ್ಲುಳಿದ
ತೇವಗೊಂಡ ದೀಪ.
***********
ಬೃಹದಾಕಾರವಾಗಿ
ಬೆಳೆಯುತ್ತಿದೆ ಗೋಡೆ :
ಬಯಲುಗಳ ಅಳಿಸಿ
ಮೀರಿ ಎಲ್ಲ ಅಡೆ ತಡೆ.
***********
ಮನದ ಭಾವಗಳು
ರೂಪುಗೊಳ್ಳುವ ಹೊತ್ತು :
ಕವಿತೆಗೆ ಹೇಳಿ ಕಳಿಸಿ
ಬಿಟ್ಟಿರಬೇಡ ಬಹಳ ಹೊತ್ತು.
***********
ಅಗಲಿಕೆಯಲ್ಲಿ ಉಳಿದ
ಫಲಿತ ಶೋಕ :
ನೆನಪುಗಳಿಗೆ ಸಮನಿಲ್ಲ
ಯಾವ ಗ್ರಂಥದ ಶ್ಲೋಕ.
*************
ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ